ದಿ ಮ್ಯಾನ್-ಈಟರ್ಸ್ ಆಫ್ ಸಾವೊ ೧೯೦೭ರಲ್ಲಿ ಜಾನ್ ಹೆನ್ರಿ ಪ್ಯಾಟರ್ಸನ್ ಬರೆದ ಒಂದು ಪುಸ್ತಕ, ಇದು ಕೀನ್ಯಾದಲ್ಲಿ ರೈಲುಮಾರ್ಗ-ಸೇತುವೆಯ ನಿರ್ಮಾಣದ ಮೇಲ್ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿನ ಆತನ ಅನುಭವವನ್ನು ನಿರೂಪಿಸುತ್ತದೆ. ಇದು ಆತನು ಕೊಂದ ಸಾವೊ ನರಭಕ್ಷಕಗಳೆಂದು ಕರೆಯಲಾಗುತ್ತಿದ್ದ ಒಂದು ಜೊತೆ ಸಿಂಹಗಳ ಕಥೆಯನ್ನು ವಿವರಿಸುವುದರಿಂದ ವ್ಯಾಪಕವಾಗಿ ಹೆಸರುವಾಸಿಯಾಗಿದೆ. == ಸ್ಥೂಲ ಅವಲೋಕನ == ಸಿಂಹಗಳ ಸಾವಿನ ವಿವರಣೆಯ ನಂತರ ಪುಸ್ತಕವು, ಅನೇಕ ಸವಾಲುಗಳಿದ್ದರೂ (ಉದಾ, ತೀವ್ರ ಪ್ರವಾಹ) ಸೇತುವೆಯ ನಿರ್ಮಾಣ-ಕಾರ್ಯದ ಪೂರ್ಣಗೊಳ್ಳುವಿಕೆ ಮಾತ್ರವಲ್ಲದೆ ಸ್ಥಳೀಯ ವನ್ಯಜೀವಿಗಳು (ಇತರ ಸಿಂಹಗಳನ್ನೂ ಒಳಗೊಂಡಂತೆ), ಸ್ಥಳೀಯ ಬುಡಕಟ್ಟು ಜನಾಂಗಗಳು, ನರಭಕ್ಷಕಗಳ ಗುಹೆಗಳ ಪತ್ತೆ ಮತ್ತು ವಿವಿಧ ಬೇಟೆಯ ಸಾಹಸಗಳು ಮೊದಲಾದವುಗಳಿಗೆ ಸಂಬಂಧಿಸಿದ ಹಲವಾರು ಕಥೆಗಳನ್ನು ವಿವರಿಸುತ್ತದೆ. ಅನುಬಂಧವು ಬ್ರಿಟಿಷ್ ಪೂರ್ವ ಆಫ್ರಿಕಾಕ್ಕೆ ಭೇಟಿ ನೀಡುವ, ಬೇಟೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಸಲಹೆಯನ್ನು ಹೊಂದಿದೆ. ಈ ಪುಸ್ತಕವು ಪ್ಯಾಟರ್ಸನ್ ಆ ಸಂದರ್ಭದಲ್ಲಿ ತೆಗೆದ ಛಾಯಾಚಿತ್ರಗಳನ್ನೂ ಒಳಗೊಂಡಿದೆ, ಅವುಗಳೆಂದರೆ ರೈಲುಮಾರ್ಗ ನಿರ್ಮಾಣ, ಕೆಲಸಗಾರರು, ಸ್ಥಳೀಯ ಬುಡಕಟ್ಟು-ಜನಾಂಗದವರು, ಪ್ರಕೃತಿಯ ದೃಶ್ಯಗಳು, ವನ್ಯಜೀವಿಗಳು ಮತ್ತು ನರಭಕ್ಷಕಗಳು. ಸಾವೊದ ನರಭಕ್ಷಕ ಸಿಂಹಗಳ ಬಗೆಗಿನ ಅನೇಕ ಪ್ರಕಟನೆಗಳು ಮತ್ತು ಅಧ್ಯಯನಗಳು ಪ್ಯಾಟರ್ಸನ್‌ನ ಕಥೆಯಿಂದ ಸ್ಫೂರ್ತಿ ಪಡೆದಿವೆ. ಈ ಪುಸ್ತಕವನ್ನು ಮೂರು ಬಾರಿ ಚಲನಚಿತ್ರಕ್ಕೆ ಬಳಸಿಕೊಳ್ಳಲಾಗಿದೆ: ೧೯೫೦ರ ಏಕವರ್ಣದ ಬ್ರಿಟಿಷ್ ಚಲನಚಿತ್ರ, ಬ್ವಾನ ಡೆವಿಲ್ ಹೆಸರಿನ೧೯೫೨ರ ೩- ಚಲನಚಿತ್ರ ಮತ್ತು ದಿ ಘೋಸ್ಟ್ ಆಂಡ್ ದಿ ಡಾರ್ಕ್ನೆಸ್ ಎಂಬ ಶೀರ್ಷಿಕೆಯ ೧೯೯೬ರ ಬಣ್ಣದ ಚಲನಚಿತ್ರ, ಇದರಲ್ಲಿ ವಾಲ್ ಕಿಲ್ಮರ್ ಸಾವೊದ ಸಿಂಹಗಳನ್ನು ಬೇಟೆಯಾಡಿ ಕೊಲ್ಲುವ ಧೈರ್ಯಶಾಲಿ ಎಂಜಿನಿಯರ್‌ನ ಪಾತ್ರದಲ್ಲಿ ನಟಿಸಿದ್ದಾರೆ. == ನರಭಕ್ಷಕಗಳ ಕಥೆಯ ಐತಿಹಾಸಿಕತೆ == ಈ ಪುಸ್ತಕವನ್ನು ವಿಕ್ಟೋರಿಯನ್ ಕಾಲದ ಶೈಲಿಯಲ್ಲಿ ಬರೆಯಲಾಗಿದೆ, ಅದು ಇಂದು ಅತಿ ವಿಸ್ತಾರವಾಗಿ ಯಾ ಅತಿ ಆಲಂಕರಿಕವಾಗಿ ಬರೆದಂತೆ ಕಾಣಬಹುದು. ಆದರೆ, ಹೆಚ್ಚು ಮತ್ತು ಭೀಕರ ನಿಜಸಂಗತಿಗಳು ತಿಳಿದಿರುವ ಹ್ಯಾಸ್ಲೆಮ್‌ನ ಸಾವಿನಂತಹ ಕೆಲವು ಅಂಶಗಳು ನಿಜವಾಗಿಯೂ ಮಹತ್ವ ಕಳೆದುಕೊಂಡಿವೆಯೆಂದು ಮರುಮುದ್ರಣದ ಬಗ್ಗೆ ಸಂಪಾದಕರು ದೂರಿದ್ದಾರೆ. ಈ ಪುಸ್ತಕವು ೧೮೯೮ರಲ್ಲಿ ಕೀನ್ಯಾದ ಸಾವೊದ ಉಗಾಂಡ ರೈಲುಮಾರ್ಗದ ನಿರ್ಮಾಪಕರ ಮೇಲೆ ನರಭಕ್ಷಕ ಸಿಂಹಗಳ ದಾಳಿಗಳು ಮತ್ತು ಅಂತಿಮವಾಗಿ ಆ ಸಿಂಹಗಳನ್ನು ಪ್ಯಾಟರ್ಸನ್ ಹೇಗೆ ಕೊಂದರು ಎಂಬುದನ್ನು ವಿವರಿಸುತ್ತದೆ. ಪ್ಯಾಟರ್ಸನ್ ಆ ನರಭಕ್ಷಕಗಳನ್ನು ಕೊಲ್ಲುವುದಕ್ಕಿಂತ ಮೊದಲು ಒಂದು ವರ್ಷದೊಳಗೆ ಅವು ಸುಮಾರು ೧೩೫ ಮಂದಿಯನ್ನು ಕೊಂದಿದ್ದವೆಂಬುದು ಗಮನಾರ್ಹ ಅಂಶವಾಗಿತ್ತು (ಆದರೆ ಈ ಅಂಕಿಯ ಬಗ್ಗೆ ವಾಗ್ವಾದವಿದೆ). ಕರ್ನಲ್ ಪ್ಯಾಟರ್ಸನ್‌ರ ೧೯೦೭ರ ಪುಸ್ತಕವು 'ಅವುಗಳಿಂದ (ಸಿಂಹಗಳು) ಯಾವುದೇ ಅಧಿಕೃತ ದಾಖಲೆಗಳು ಕಂಡುಬರದ ದುರಾದೃಷ್ಟ ಆಫ್ರಿಕನ್ ನಿವಾಸಿಗಳ ಸಾವಿನ ಸಂಖ್ಯೆಗೆ ಹೆಚ್ಚುವರಿಯಾಗಿ ೨೮ಕ್ಕಿಂತ ಕಡಿಮೆಯಿಲ್ಲದಷ್ಟು ಭಾರತೀಯ ಕೂಲಿಗಳು' ಸಾಯಿಸಲ್ಪಟ್ಟಿದ್ದಾರೆಂದು ಹೇಳುತ್ತದೆ. ಈ ಕಡಿಮೆ ಸಂಖ್ಯೆಯು ೨೦೦೪ರಲ್ಲಿ ಮ್ಯಾಕ್‌ಗ್ರಾ-ಹಿಲ್‌ನಿಂದ ಪ್ರಕಟಿಸಲ್ಪಟ್ಟ ಡಾ. ಬ್ರೂಸ್ ಪ್ಯಾಟರ್ಸನ್‌ರ ಪ್ರಮಾಣಭೂತ ಪುಸ್ತಕ ದಿ ಲಯನ್ಸ್ ಆಫ್ ಸಾವೊ: ಎಕ್ಸ್‌ಪ್ಲೋರಿಂಗ್ ದಿ ಲೆಗೆಸಿ ಆಫ್ ಆಫ್ರಿಕಾಸ್ ನೊಟೋರಿಯಸ್ ಮ್ಯಾನ್-ಈಟರ್ಸ್ ‌ನಿಂದ ದೃಢಪಡಿಸಲ್ಪಟ್ಟಿದೆ. ಪ್ಯಾಟರ್ಸನ್ ಸಿಂಹಗಳನ್ನು ಪ್ರದರ್ಶನಕ್ಕಿಟ್ಟಿರುವ ಚಿಕಾಗೊದ ಫೀಲ್ಡ್ ಮ್ಯೂಸಿಯಂನಲ್ಲಿ ಈ ಪುಸ್ತಕವನ್ನು ಬರೆದರು. ೧೯೨೫ರಲ್ಲಿ ಕರ್ನಲ್ ಪ್ಯಾಟರ್ಸನ್ ಬರೆದ ಚಿಕ್ಕ ಪುಸ್ತಕದಲ್ಲಿ ಸೂಚಿಸಿದಂತೆ ಆ ಸಿಂಹಗಳಿಂದ ಹೆಚ್ಚಿನ ಸಂಖ್ಯೆಯ ಮಂದಿ ಸಾಯಿಸಲ್ಪಟ್ಟಿದ್ದಾರೆಂದು ಆತ ಹೇಳಿದರು, ಆ ಚಿಕ್ಕ ಪುಸ್ತಕವು ಹೀಗೆಂದು ನಿರೂಪಿಸುತ್ತದೆ - 'ಈ ಎರಡು ಕ್ರೂರ ಮೃಗಗಳು ಹೆಚ್ಚು ಭೀತಿಗೊಳಿಸುವಂಥ ಪರಿಸ್ಥಿತಿಗಳಲ್ಲಿ ಉಗಾಂಡ ರೈಲುಮಾರ್ಗ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ೧೩೫ ಭಾರತೀಯ ಮತ್ತು ಆಫ್ರಿಕನ್ ಕುಶಲ ಯಂತ್ರಕಾರರು ಮತ್ತು ಕೆಲಸಗಾರರನ್ನು ಕೊಂದು ತಿಂದಿದೆ." ಈ ಸಿಂಹಗಳ ಚರ್ಮಗಳನ್ನು ಚಿಕಾಗೊದ ಫೀಲ್ಡ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿ ನೋಡಬಹುದು. == ಸನ್ನಿವೇಶ == ಈ ಪುಸ್ತಕವನ್ನು ಪೂರ್ವ ಆಫ್ರಿಕಾದಲ್ಲಿ ಬರೆಯಲಾಗಿದೆ. ನರಭಕ್ಷಕಗಳ ದಾಳಿಗೆ ಹತ್ತಿರವಾದ ದೊಡ್ಡ ನಗರ ಮೊಂಬಾಸ, ಇದು ಕೀನ್ಯಾದಲ್ಲೇ ಎರಡನೇ ಅತ್ಯಂತ ದೊಡ್ಡ ನಗರವಾಗಿದ್ದು ೪೪೨,೩೬೯ ಜನಸಂಖ್ಯೆಯನ್ನು ಹೊಂದಿದೆ. ಸಾವೊ ನರಭಕ್ಷಕಗಳ ದಾಳಿಗಳು ಉಗಾಂಡ ರೈಲುಮಾರ್ಗದ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಕಂಡುಬಂದವು. ಈ ರೈಲುಮಾರ್ಗವು ಉಗಾಂಡ, ಕೀನ್ಯಾ ಮತ್ತು ಟಾಂಜೇನಿಯಾದ ಮೂಲಕ ಸಾಗಿತು ಹಾಗೂ ಮೊಂಬಾಸ, ನೈರೋಬಿ, ಟಾಂಗ, ದಾರ್ ಎಸ್ ಸಲಾಮ್, ಪಾಂಡ, ಕಿಗ್ಮಾ, ಟುಂಡುಮ, ಕಿಡಾಟು, ಟಬೋರ, ವಾಂಜ, ಅರುಶಾ, ಮೋಶಿ, ನಗೇಡಿ, ನಾನ್ಯುಕಿ, ನಕುರು, ಕಿಸುಮು, ಕಾಸೆಸೆ, ಕಾಂಪಲ, ಟೊರೋರೊ ಮತ್ತು ಅನುವಾ ಮೊದಲಾದ ಪ್ರಮುಖ ನಗರಗಳನ್ನು ಒಳಗೊಂಡಿತ್ತು. ಸೇತುವೆ ಯೋಜನೆಯು ವಿವಾದಾತ್ಮಕವಾಗಿತ್ತು ಮತ್ತು ಇದನ್ನು ವಿಮರ್ಶಕರು ಹಣದ ಪೋಲುಮಾಡುವಿಕೆಯೆಂದು ಭಾವಿಸಿದರಿಂದ ಬ್ರಿಟಿಷ್ ಪ್ರೆಸ್ ಇದನ್ನು 'ದಿ ಲುನಾಟಿಕ್ ಎಕ್ಸ್‌ಪ್ರೆಸ್' ಎಂದು ನಿರೂಪಿಸಿತು, ಅದೇ ಈ ಯೋಜನೆಯ ಬೆಂಬಲಿಗರು ಇದು ಸರಕುಗಳ ಸಾಗಣೆಗೆ ಅಗತ್ಯವಾದುದೆಂದು ವಾದಿಸಿದರು. ಆ ಯೋಜನೆಯು ಯಶಸ್ವಿಯಾದರೂ ಮತ್ತು ಪ್ಯಾಟರ್ಸನ್‌ನ ಸೇತುವೆಯು ಪ್ರಬಲವಾಗಿದ್ದರೂ, ಅದನ್ನು ಜರ್ಮನ್ ಸೈನ್ಯವು ಪೂರ್ವ ಆಫ್ರಿಕನ್ ಕಾರ್ಯಾಚರಣೆಯ ಸಂದರ್ಭದಲ್ಲಿ ಸಿಡಿಸಿತು. == ಕಥಾವಸ್ತು == ಕರ್ನಲ್ ಜಾನ್ ಪ್ಯಾಟರ್ಸನ್ ಪೂರ್ವ ಆಫ್ರಿಕಾದಲ್ಲಿ (ಆಗಿನ ಕೀನ್ಯಾ) ಸೇತುವೆಯೊಂದನ್ನು ನಿರ್ಮಿಸುತ್ತಿರುತ್ತಾರೆ. ಆತ ಆ ಕಾರ್ಯದಲ್ಲಿ ತೊಡಗಿರುವಾಗ, ಎರಡು ನರಭಕ್ಷಕ ಸಿಂಹಗಳು ಕಂಡುಬರುತ್ತವೆ. ಅವು ಮಾನವನ ಮಾಂಸಕ್ಕಾಗಿ ಹುಡುಕಾಡುತ್ತಿರುತ್ತವೆ ಮತ್ತು ಅವನ್ನು ಹುಡುಕುವ, ಸೆರೆಹಿಡಿಯುವ ಅಥವಾ ಬಿಡಾರದಿಂದ ದೂರಕ್ಕೆ ಓಡಿಸುವ ಮೊದಲ ಪ್ರಯತ್ನಗಳೆಲ್ಲವೂ ವಿಫಲಗೊಳ್ಳುತ್ತವೆ. ಅವು ಬಿಡಾರದ ಆಸ್ಪತ್ರೆಯ ಮೇಲೆ ದಾಳಿ ಮಾಡಿ, ರೋಗಿಯೊಬ್ಬನನ್ನು ಸಾಯಿಸುತ್ತವೆ. ಆಸ್ಪತ್ರೆಯನ್ನು ಬೇರೆಡೆಗೆ ಸರಿಸಿದ ನಂತರವೂ, ಒಂದು ಸಿಂಹವು ಆಸ್ಪತ್ರೆಯ ರಕ್ಷಣೆಗೆ ನಿರ್ಮಿಸಿದ ಗಟ್ಟಿಯಾದ ಮುಳ್ಳಿನ ಬೇಲಿಯನ್ನು ಭೇದಿಸುತ್ತದೆ ಮತ್ತು ನೀರಿನ ಸಂಗ್ರಾಹಕವನ್ನು ಎಳೆದುಕೊಂಡು ಹೋಗುತ್ತದೆ. ಈ ಸಿಂಹಗಳನ್ನು ಬೇಟೆಯಾಡುವಾಗ ದಾರಿಯಲ್ಲಿ ಪ್ಯಾಟರ್ಸನ್ ಬುಸುಗಟ್ಟುವ ಕೆಂಪು ನಾಗರಹಾವು, ಖಡ್ಗಮೃಗ, ನೀರ್ಗುದುರೆ, ಕಾಡು ನಾಯಿಗಳ ಹಿಂಡು, ವೈಲ್ಡೆಬೀಸ್ಟ್(ನೂ) ಮತ್ತು ಜೀಬ್ರಾಗಳ ಹಿಂಡು, ಅದರಲ್ಲಿ ಆತ ಆರನ್ನು ಸೆರೆಹಿಡಿಯುತ್ತಾರೆ, ಮೊದಲಾದವನ್ನು ಸಂಧಿಸುತ್ತಾರೆ. ಆತ ಒಂದು ಹೊಸ ರೀತಿಯ ಹುಲ್ಲೆ ಟಿ. ಒರಿಕ್ಸ್ ಪ್ಯಾಟರ್ಸೋನಿಯಸ್ಅನ್ನೂ ಸಾಯಿಸುತ್ತಾರೆ. ಅಂತಿಮವಾಗಿ, ಹಗ್ಗದಿಂದ ಕಟ್ಟುಹಾಕಿದ ಆಡನ್ನು ಆಹಾರವಾಗಿ ಇಟ್ಟು ಪ್ಯಾಟರ್ಸನ್ ಎತ್ತರದ ಸ್ಥಾನದಲ್ಲಿ ಕುಳಿತುಕೊಂಡು ವೀಕ್ಷಿಸುತ್ತಾ ಮೊದಲ ಸಿಂಹವನ್ನು ಸಾಯಿಸುತ್ತಾರೆ - ಪ್ಯಾಟರ್ಸನ್ ಉದ್ವೇಗದ ಕೆಲವು ನಿಮಿಷಗಳಲ್ಲಿ ತಾನೇ ಬೇಟೆಯಾಗುವಂತಿದ್ದರೂ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ. ಪ್ಯಾಟರ್ಸನ್ ಮತ್ತು ಮಹಿನಾ ಮತ್ತೊಂದು ಸಿಂಹವನ್ನು ಬಯಲು ಪ್ರದೇಶದಲ್ಲಿ ಬೇಟೆಯಾಡುತ್ತಾರೆ. ಅವರು ಅದನ್ನು ಪತ್ತೆಹಚ್ಚಿ, ಗುಂಡು ಹೊಡೆಯುವ ಹೊತ್ತಿಗೆ ಆ ಸಿಂಹವು ಅವರ ಮೇಲೆ ದಾಳಿ ಮಾಡುತ್ತದೆ, ಇದರಿಂದಾಗಿ ಅದನ್ನು ಹೊಡೆದುರುಳಿಸಲು ಹಲವಾರು ಬಾರಿ ಗುಂಡು ಹೊಡೆಯಬೇಕಾಗುತ್ತದೆ. ಆ ಸಿಂಹಗಳು ಸೇತುವೆಯ ನಿರ್ಮಾಣ ಯೋಜನೆಗೆ ನಿರ್ಬಂಧ ಹೇರಿದ ಏಕೈಕ ಸವಾಲಾಗಿರಲಿಲ್ಲ. ಆ ಯೋಜನೆಯಲ್ಲಿ ಕೆಲಸ ಮಾಡಲು ಬ್ರಿಟಿಷ್ ಈಸ್ಟ್ ಇಂಡಿಯಾದಿಂದ ಕರೆದುಕೊಂಡು ಬಂದ ಸಿಖ್ಖರು ಮತ್ತು ಸ್ಥಳೀಯ ಕಾರ್ಮಿಕರ ನಡುವಿನ ಉದ್ವಿಗ್ನತೆಗಳು ಯೋಜನೆಯನ್ನು ನಿಲ್ಲಿಸುವಂತೆ ಮಾಡುತ್ತವೆ. ಪ್ಯಾಟರ್ಸನ್ ಸಿಂಹಗಳಿಗಿಂತ ಅತಿ ದೊಡ್ಡ ಅಪಾಯವನ್ನು ಎದುರಿಸುತ್ತಾರೆ - ತೀವ್ರ ಪ್ರವಾಹ. ಇದು ಪೂರೈಕೆ ಸೇತುವೆಗಳನ್ನು ಕೊಚ್ಚಿಕೊಂಡು ಹೋಗುತ್ತದೆ ಮತ್ತು ಕಬ್ಬಿಣದ ತೊಲೆಗಳನ್ನು ಮರದ ಕಾಂಡದ ಸುತ್ತಲೂ ತಂತಿಯಂತೆ ಸುತ್ತುತ್ತದೆ. ಬುಡಮೇಲಾದ ಮರದ ಕಾಂಡಗಳು ಸೇತುವೆಯನ್ನು ನಿರ್ಮೂಲನಗೊಳಿಸಲು ಪ್ರಯತ್ನಿಸುವ ಜಡಿ-ದಿಮ್ಮಿಗಳಂತೆ ವರ್ತಿಸುತ್ತವೆ. ಆದರೆ ಉತ್ತಮವಾಗಿ ನಿರ್ಮಿಸಲಾದ ಸೇತುವೆಯು ಯಾವುದೇ ಹಾನಿಗೊಳಗಾಗದೆ ಅಚ್ಚಳಿಯದೆ ನಿಲ್ಲುತ್ತದೆ. ಈ ಸವಾಲು ಸೇತುವೆಯನ್ನು ನಿರ್ಮಿಸಲು ಕಳೆದ ದಿನಗಳು ಪೋಲಾಗಲಿಲ್ಲವೆಂಬುದನ್ನು ಪ್ರಮಾಣೀಕರಿಸುತ್ತದೆ. ಪ್ಯಾಟರ್ಸನ್ ಸೇತುವೆಯನ್ನು ಪೂರ್ಣಗೊಳಿಸಿದ ನಂತರ, ಸಿಂಹವೊಂದು ರೈಲು ನಿಲ್ದಾಣವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದೆಯೆಂಬುದನ್ನು ತಿಳಿಯುತ್ತಾರೆ. ಆತ ಅಲ್ಲಿಗೆ ಹೋದಾಗ, ಆ ಸಿಂಹವು ಚಾವಣಿಯನ್ನು ಸೀಳಲು ಪ್ರಯತ್ನಿಸಿದಲ್ಲಿ ರಕ್ತದ ಕಲೆಗಳನ್ನು ಗಮನಿಸುತ್ತಾರೆ. ಅಲ್ಲಿ ಒಂದು ಕಂಪಾರ್ಟ್ಮೆಂಟ್‌ನಲ್ಲಿ ೩ ಮಂದಿ ಪುರುಷರು ಹಾಗೂ ಮತ್ತೊಂದರಲ್ಲಿ ಹಲವಾರು ಸಂಖ್ಯೆಯ ಕೂಲಿಗಳಿದ್ದರು. ಸಿಂಹವು ಅಲ್ಲಿಗೆ ಬಂದಾಗ ಅವರಲ್ಲಿ ಇಬ್ಬರು ಪುರುಷರು ನೆಲದ ಮೇಲೆ ಮಲಗಿದ್ದರು. ಸಿಂಹವು ಮತ್ತೊಬ್ಬನ ಮೇಲೆ ದಾಳಿ ಮಾಡಲು ಪ್ರಯತ್ನಿಸುವಾಗ ಅದಾಗಲೇ ಒಬ್ಬನ ಮೇಲಿತ್ತು. ಕೂಲಿಗಳು ತಮ್ಮ ರುಮಾಲುಗಳಿಂದ ಮುಚ್ಚುವಂತೆ ಹಿಡಿದಿದ್ದ ಮತ್ತೊಂದು ಭಾಗಕ್ಕೆ ಹೋಗಲು ಪ್ರಯತ್ನಿಸುತ್ತಿದ್ದ ಒಬ್ಬನು ಸಿಂಹದ ಹಿಂಭಾಗಕ್ಕೆ ಹಾರಿದನು ಮತ್ತು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ತೀವ್ರ ಪ್ರಯತ್ನ ಮಾಡಿದನು. ಕೂಲಿಗಳು ಆತನಿಗೆ ಮಾತ್ರ ಒಳಕ್ಕೆ ಬರಲು ಸಾಧ್ಯವಾಗುವಷ್ಟು ಬಾಗಿಲನ್ನು ತೆರೆದು, ಮತ್ತೊಮ್ಮೆ ಹಾಗೆಯೇ ಮುಚ್ಚಿದರು. ಇತರರ ಪ್ರಕಾರ ಒಬ್ಬನನ್ನು ಆ ಸಿಂಹವು ಎಳೆದುಕೊಂಡು ಹೋಗಿ, ತಿಂದಿರುತ್ತದೆ. ಇನ್ನೊಬ್ಬನು ಬಹುಶಃ ತನ್ನ ಜೀವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾ ಅಲ್ಲಿ ಬಿದ್ದಿರುತ್ತಾನೆ. ಇದನ್ನು ಕೇಳಿದ ಪ್ಯಾಟರ್ಸನ್ ಆ ಸಿಂಹವನ್ನು ಹುಡುಕಿಕೊಂಡು ಹೋಗಲು ನಿರ್ಧರಿಸುತ್ತಾರೆ, ಅಂತಿಮವಾಗಿ ಅದನ್ನು ಕಂಡುಹಿಡಿದು ಕೊಲ್ಲುತ್ತಾರೆ. ಸಣ್ಣ ಟ್ರಾಲಿಯಂತಿರುವ ಕೀನ್ಯಾದ ಒಂದು ಸಾರಿಗೆ ಸಾಧನ ಘಾರಿಯೊಳಗೆ ಆತ ಮತ್ತೊಂದು ಬಾರಿ ಸಿಂಹವನ್ನು ಎದುರಿಸುತ್ತಾರೆ. ಇನ್ನೊಮ್ಮೆ, ರೈಲು ನಿಲ್ದಾಣಕ್ಕೆ ಹಿಂದಿರುಗುವಾಗ ದಾರಿಯಲ್ಲಿ ಪ್ಯಾಟರ್ಸನ್ ಒಬ್ಬನೊಂದಿಗೆ ಸ್ನೇಹ ಬೆಳೆಸುತ್ತಾರೆ, ಆತ ತಾನು ಇದುವರೆಗೆ ಸಿಂಹವನ್ನು ಬೇಟೆಯಾಡಿಲ್ಲವೆಂದು ಹೇಳುತ್ತಾನೆ. ಸುಮಾರು ನೂರು ಗಜಗಳಷ್ಟು ದೂರದಲ್ಲಿ ಪ್ಯಾಟರ್ಸನ್ ಒಂದು ಜೊತೆ ಸಿಂಹಗಳನ್ನು ತೋರಿಸಿ, ಅವುಗಳಿಗೆ ಗುಂಡುಹೊಡೆಯುವಂತೆ ಆತನಿಗೆ ಪ್ರೋತ್ಸಾಹಿಸುತ್ತಾರೆ. ಮೊದಲ ಹೊಡೆತದಲ್ಲಿ ಒಂದು ಸಿಂಹವು ಓಡಿಹೋಗುತ್ತದೆ, ಆದರೆ ಆತ ಮತ್ತೊಂದು ಸಿಂಹವು ಯಶಸ್ವಿಯಾಗಿ ಗುಂಡು ಹೊಡೆದು ಕೊಲ್ಲುತ್ತಾನೆ. ಪುಸ್ತಕದ ಕೊನೆಯಲ್ಲಿ ಸ್ನೇಹಿತನು ಕೊಂದ ಸಿಂಹದ ಒಂದು ಚಿತ್ರವಿದೆ. ಪ್ಯಾಟರ್ಸನ್ ಆ ಸ್ಥಳವನ್ನು ಬಿಟ್ಟುಹೋಗುವ ಸಮಯವು ಹತ್ತಿರಕ್ಕೆ ಬಂದಾಗ, ಕೆಲವು ಕೂಲಿಗಳು ಮತ್ತು ಸ್ಥಳೀಯರು ಆತನೊಂದಿಗೆ ಹೋಗಲು ಬಯಸುತ್ತಾರೆ. ಆದರೆ ಪ್ಯಾಟರ್ಸನ್ ಅವರು ಆಫ್ರಿಕಾದಿಂದ ಹೊರಗಿರುವ ಕಾಯಿಲೆಗಳನ್ನು ಎದುರಿಸುವ ಪ್ರತಿರಕ್ಷಣ ವ್ಯವಸ್ಥೆಯನ್ನು ಹೊಂದಿಲ್ಲವೆಂಬುದನ್ನು ತಿಳಿದಿರುತ್ತಾರೆ. ಆದ್ದರಿಂದ ಆತ ವಿನೀತವಾಗಿ ಬೇಡವೆಂದು ನಿರಾಕರಿಸಿ, ಕೆಲವು ವರ್ಷಗಳಿಗೆ ಆಫ್ರಿಕಾವನ್ನು ಬಿಡುತ್ತಾರೆ. (ನಂತರ ಆತ ಆಫ್ರಿಕಾಕ್ಕೆ ಹಿಂದಿರುಗುತ್ತಾರೆ, ಆದರೆ ಆತನ ಜೀವನದ ಈ ಭಾಗವು ಈ ಪುಸ್ತಕದಲ್ಲಿ ದಾಖಲಾಗಿಲ್ಲ.) == ಪಾತ್ರಗಳು == === ಸಿಂಹಗಳು === ನರಭಕ್ಷಕ ೧ (ದಿ ಘೋಸ್ಟ್) ೯'೯" ಉದ್ದ ಮತ್ತು ೩'೯" ಎತ್ತರವಿದೆ. ನರಭಕ್ಷತ ೨ (ದಿ ಡಾರ್ಕ್ನೆಸ್) ೯'೬" ಉದ್ದ ಮತ್ತು ೩'೧೧" ಎತ್ತರವಿದೆ. === ಪಾತ್ರವರ್ಗ === ಜಾನ್ ಪ್ಯಾಟರ್ಸನ್ ಈ ಪುಸ್ತಕದ ಲೇಖಕ ಮತ್ತು ಮುಖ್ಯ ಪಾತ್ರವಾಗಿದ್ದಾರೆ. ಆ ಸಂದರ್ಭದಲ್ಲಿ ಆತ ಬ್ರಿಟಿಷ್ ಸೈನ್ಯದ ಲೆಫ್ಟೆನಂಟ್ ಕರ್ನಲ್ ಆಗಿದ್ದು ಇಂಜಿನಿಯರ್ ಆಗಿ ತರಬೇತಿ ಪಡೆದಿರುತ್ತಾರೆ. ಆತ ಅತ್ಯಂತ ಹುರುಪಿನ ಹವ್ಯಾಸಿ ಬೇಟೆಗಾರರಾಗಿರುತ್ತಾರೆ. ಇತರ ಪಾತ್ರಗಳೆಂದರೆ — ಆಂಡರ್ಸನ್ - ರೈಲುಮಾರ್ಗ ಯೋಜನೆಯ ಮೇಲ್ವಿಚಾರಕ ಮ್ಯಾಕ್‌ಕುಲ್ಲೋಚ್ - ವೈದ್ಯಕೀಯ ಸೌಕರ್ಯದ ಜವಾಬ್ದಾರಿ ವಹಿಸಿದ ವ್ಯಕ್ತಿ ಡಾ. ರೋಸ್ ವೈದ್ಯಕೀಯ ಅಧಿಕಾರಿ ಮತ್ತು ಪ್ಯಾಟರ್ಸನ್‌ನ ಸ್ನೇಹಿತೆ. ಡಾ. ಬ್ರೋಕ್ - ಸ್ನೇಹಿತ ಮತ್ತು ಸಹಚರ ಬೇಟೆಗಾರ. "ಕೂಲಿಗಳು" ಎಂಬುದು ರೈಲುಮಾರ್ಗ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡಲು ಬ್ರಿಟಿಷ್ ಇಂಡಿಯಾದಿಂದ ಕರೆದುಕೊಂಡು ಬಂದ ಭಾರತೀಯ ಕಾರ್ಮಿಕರಿಗೆ ಬಳಸಿದ ಪದವಾಗಿದೆ. ಯೋಜನೆಯು ಪೂರ್ಣಗೊಂಡ ನಂತರ ಇವರಲ್ಲಿ ಹೆಚ್ಚಿನವರು ಪೂರ್ವ ಆಫ್ರಿಕಾದಲ್ಲಿ ಉಳಿದುಕೊಂಡರು. ಹೀರಾ ಸಿಂಗ್ - ಬೀಳುತ್ತಿದ್ದ ಬಂಡೆಗಲ್ಲಿನಿಂದ ಹೆಚ್ಚುಕಡಿಮೆ ನುಚ್ಚುನೂರಾದ ಕೆಲಸಗಾರ್ತಿ. ಪುರುಷೋತ್ತಮ್ ಹುರೀ - ರೈಲುಮಾರ್ಗ ನಿರ್ಮಾಣ ಕಾರ್ಯದ ಮೇಲ್ವಿಚಾರಕ. ಕರಿಮ್ ಬಕ್ಸ್ - ತೊಂದರೆಗಾರನಾದ ಈತನ ಯೋಜನೆಯನ್ನು ಪ್ಯಾಟರ್ಸನ್ ಬಹಿರಂಗಪಡಿಸುತ್ತಾರೆ. ವೈಟ್‌ಹೆಡ್ - ಜಿಲ್ಲಾ ಅಧಿಕಾರಿಯಾದ ಈತ ಸಿಂಹಗಳಿಂದ ಚಿಂದಿಚಿಂದಿಯಾಗುತ್ತಾರೆ. ಶ್ರೀ ಕ್ರಾಫೋರ್ಡ್ ಬ್ರಿಟಿಷ್ ಕಾನ್ಸಲ್. ಡಾಲ್ಗೈರ್ಮ್ಸ್ - ಮೇಲ್ವಿಚಾರಕರಾದ ಈತ ಸಿಂಹವೊಂದರಿಂದ ಹೆಚ್ಚುಕಡಿಮೆ ಚಿಂದಿಚಿಂದಿಯಾಗುತ್ತಾರೆ. ಅಬ್ದುಲ್ಲಾಹ್ - ವೈಟ್‌ಹೆಡ್‌ರ ಅಸ್ಕಾರಿಸ್ ‌ನ ಸಾರ್ಜೆಂಟ್, ಈತ ಸಿಂಹಗಳಿಂದ ಸಾಯಿಸಲ್ಪಡುತ್ತಾರೆ. ಫರ್ಕ್ಯುಹಾರ್ - ಬೇಟೆಯ ತಂಡದ ಸದಸ್ಯ. ಮಹೀನ - ಪ್ಯಾಟರ್ಸನ್‌ನ ಗನ್-ಹುಡುಗ. ಮಾಬ್ರುಕಿ - ಬಿಡಾರದ ಅಡುಗೆಯವ. ಮೂಟ - ಮುಸ್ಲಿಂ ಬೇಟೆಯ ಸಹಾಯಕ. ಒಹಾರ - ಆಕೆಯ ಪತಿಯು ಸಾಯಿಸಲ್ಪಡುತ್ತಾನೆ. ರೋಶನ್ ಖಾನ್ - ಸಹಾಯಕ. ಸ್ಪೂನರ್ - ಪ್ಯಾಟರ್ಸನ್‌ನ ಉತ್ತಮ ಸ್ನೇಹಿತ. ಇಮಾಮ್ ಡಿನ್ - ಸ್ಪೂನರ್‌ನ ಧೈರ್ಯದ ಸೇವಕ. ಭೂಟ - ಸೇವಕ. ಲಂಡಾಲು - ಸ್ಥಳೀಯ ಮಾರ್ಗನಿರ್ದೇಶಕ. == ಸಾಂಸ್ಕೃತಿಕ ಪ್ರಭಾವ == ಸಾವೊದ ನರಭಕ್ಷಕ ಸಿಂಹಗಳ ಬಗೆಗಿನ ಅನೇಕ ಪ್ರಕಟನೆಗಳು ಮತ್ತು ಅಧ್ಯಯನಗಳು ಪ್ಯಾಟರ್ಸನ್‌ನ ಕಥೆಯಿಂದ ಸ್ಫೂರ್ತಿ ಪಡೆದಿವೆ. ಸಂಬಂಧಿತ ಪುಸ್ತಕಗಳೆಂದರೆ: ದಿ ಲಯನ್ಸ್ ಆಫ್ ಸಾವೊ: ಎಕ್ಸ್‌ಪ್ಲೋರಿಂಗ್ ದಿ ಲೆಗೆಸಿ ಆಫ್ ಆಫ್ರಿಕಾಸ್ ನೊಟೋರಿಯಸ್ ಮ್ಯಾನ್ ಈಟರ್ಸ್ - ಬ್ರೂಸ್ ಪ್ಯಾಟರ್ಸನ್. ಘೋಸ್ಟ್ಸ್‌ ಆಫ್ ಸಾವೊ: ಸ್ಟಾಕಿಂಗ್ ದಿ ಮಿಸ್ಟರಿ ಲಯನ್ಸ್ ಆಫ್ ಈಸ್ಟ್ ಆಫ್ರಿಕಾ - ಫಿಲಿಪ್ ಕ್ಯಾಪುಟೊ ಈ ಪುಸ್ತಕವನ್ನು ಮೂರು ಬಾರಿ ಚಲನಚಿತ್ರಕ್ಕೆ ಬಳಸಿಕೊಳ್ಳಲಾಗಿದೆ: ೧೯೫೦ರ ಏಕವರ್ಣದ ಬ್ರಿಟಿಷ್ ಚಲನಚಿತ್ರ, ಬ್ವಾನ ಡೆವಿಲ್ ಹೆಸರಿನ೧೯೫೨ರ ೩- ಚಲನಚಿತ್ರ ಮತ್ತು ದಿ ಘೋಸ್ಟ್ ಆಂಡ್ ದಿ ಡಾರ್ಕ್ನೆಸ್ ಎಂಬ ಶೀರ್ಷಿಕೆಯ ೧೯೯೬ರ ಬಣ್ಣದ ಚಲನಚಿತ್ರ, ಇದರಲ್ಲಿ ವಾಲ್ ಕಿಲ್ಮರ್ ಸಾವೊದ ಸಿಂಹಗಳನ್ನು ಬೇಟೆಯಾಡಿ ಕೊಲ್ಲುವ ಧೈರ್ಯಶಾಲಿ ಎಂಜಿನಿಯರ್‌ನ ಪಾತ್ರದಲ್ಲಿ ನಟಿಸಿದ್ದಾರೆ. == ಉಲ್ಲೇಖಗಳು‌ == == ಬಾಹ್ಯ ಕೊಂಡಿಗಳು‌ == ದಿ ಮ್ಯಾನ್ ಈಟರ್ಸ್ ಆಫ್ ಸಾವೊ (ಟೆಕ್ಸ್ಟ್) 2002-06-13 ವೇಬ್ಯಾಕ್ ಮೆಷಿನ್ ನಲ್ಲಿ. - , ಅನ್‌ಎಬ್ರಿಡ್ಜ್ಡ್ ಆಡಿಯೊಬುಕ್ - ಲಿಬ್ರಿವೋಕ್ಸ್ ನ್ಯಾಷನಲ್ ಜಿಯೊಗ್ರಾಫಿಕ್ ಸ್ಟೋರಿ 2008-02-03 ವೇಬ್ಯಾಕ್ ಮೆಷಿನ್ ನಲ್ಲಿ. - ಹೆಚ್ಚುವರಿ ಛಾಯಾಚಿತ್ರಗಳು, ನಕ್ಷೆಗಳು ಮತ್ತು ಮಾಹಿತಿಯೊಂದಿಗೆ ಫಿಲಿಪ್ ಮತ್ತು ರಾಬರ್ಟ್ ಕ್ಯುಪುಟೊರವರ ಸಾವೊ ಸಿಂಹಗಳ ಬಗೆಗಿನ ಮಾಹಿತಿ. ಫೋಟೊ ಜರ್ನಲ್ 2010-04-19 ವೇಬ್ಯಾಕ್ ಮೆಷಿನ್ ನಲ್ಲಿ. - ಕಾರ್ಲ್ ಪ್ಯಾಲಾಜೋಲೊ, ಡಿವಿಎಮ್ ಮತ್ತು ಡಾ. ಬ್ರೂಸ್ ಪ್ಯಾಟರ್ಸನ್ ಮೊದಲಾದವರ ಕೀನ್ಯಾದ ೨೦೦೫ರ ಸಿಂಹ ಸಂಶೋಧನಾ ಪ್ರವಾಸ. ಸೈನ್ಸ್ ಡೈಲಿ, 3 ನವೆಂಬರ್ 2009: ನೊಟೋರಿಯಸ್ 'ಮ್ಯಾನ್-ಈಟಿಂಗ್' ಲಯನ್ಸ್ ಆಫ್ ಸಾವೊ ಲೈಕ್ಲಿ ಏಟ್ ಎಬೌಟ್ ೩೫ ಪೀಪಲ್—ನಾಟ್ ೧೩೫, ಸೈಂಟಿಸ್ಟ್ಸ್ ಸೇ ಅಬ್‌ಸ್ಟ್ರಾಕ್ಟ್ 2018-04-29 ವೇಬ್ಯಾಕ್ ಮೆಷಿನ್ ನಲ್ಲಿ. ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಆರ್ಟಿಕಲ್)